Friday, October 23, 2009

ಪುಸ್ತಕ ಬಿಡುಗಡೆ-ಹಾಡಿನ ಹಬ್ಬ

ಲತಾ ಮಂಗೇಶ್ಕರ್‌ ಜೀವನವನ್ನು ಕುರಿತ ಪುಸ್ತಕ ‘ಹಾಡುಹಕ್ಕಿಯ ಹೃದಯಗೀತೆ ’ ಬರುವ ಮಂಗಳವಾರ(೨೭ನೇ ತಾರೀಖು) ಸಂಜೆ ೬ ಗಂಟೆಗೆ ಅನಾವರಣಗೊಳ್ಳುತ್ತಿದೆ. ವಿಜಯ ಕರ್ನಾಟಕದ ಸುದ್ದಿ ಸಂಪಾದಕರಾದ ವಸಂತ ನಾಡಿಗೇರ ಬರೆದಿರುವ ಈ ಪುಸ್ತಕದ ಬಿಡುಗಡೆಗೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಬರುತ್ತಿರುವುದು ವಿಶೇಷ. ಐದುಗಂಟೆಗೇ ಬಂದರೆ ಉಪಾಹಾರವೂ, ಚಂದ್ರಿಕಾ ಗುರುರಾಜ್‌ ಅವರ ಕಂಠದಲ್ಲಿ ಲತಾ ಹಾಡಿದ ಹಾಡುಗಳನ್ನು ಕೇಳುವ ಭಾಗ್ಯವೂ ಸಿಕ್ಕುತ್ತದೆ. ಮರೆಯದೆ ಬನ್ನಿ. ಸ್ಥಳ: ಆನಂದರಾವ್‌ ಸರ್ಕಲ್‌ ಬಳಿ ಇರುವ ಕೆಇಬಿ ಇಂಜಿನಿಯರುಗಳ ಸಂಘದ ರಜತ ಮಹೋತ್ಸವ ಭವನ.(ರೇಸ್‌ಕೋರ್ಸ್‌ ಅಡ್ಡರಸ್ತೆ).

Sunday, October 11, 2009

ವಿವೇಕ ರೈ ಪುಸ್ತಕಗಳು



ಜರ್ಮನಿಗೆ ಅತಿಥಿ ಪ್ರಾಧ್ಯಾಪಕರಾಗಿ ತೆರಳುತ್ತಿರುವ ಬಿ ಎ ವಿವೇಕ ರೈ ಅವರನ್ನು ಅಭಿನಂದಿಸಲು ಪುಟ್ಟ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ಸೋಮವಾರ ಸಂಜೆ ೫.೩೦ಕ್ಕೆ ನಡೆಯುವ ಈ ಸಮಾರಂಭದಲ್ಲಿ ರೈ ಅವರ ಮೂರು ಪುಸ್ತಕಗಳೂ ಬಿಡುಗಡೆಯಾಗಲಿವೆ. ಆ ಪೈಕಿ ಎರಡರ ಮುಖಪುಟಗಳನ್ನು ಇಲ್ಲಿ ಕಾಣಬಹುದು.

Thursday, October 8, 2009

ಸ್ವಪ್ನ ಸಾರಸ್ವತ ಲೋಕಕ್ಕೆ ಬನ್ನಿ


ಕತೆಗಾರ ಗೋಪಾಲಕೃಷ್ಣ ಪೈ ಅವರ ಚೊಚ್ಚಲ ಕಾದಂಬರಿ ‘ಸ್ವಪ್ನ ಸಾರಸ್ವತ’ ಈ ಶನಿವಾರ ಬಿಡುಗಡೆಯಾಗುತ್ತಿದೆ. ಹಸ್ತಪ್ರತಿಯಲ್ಲೇ ಕಾದಂಬರಿಯನ್ನು ಓದಿದವರು ಇನ್ನಿಲ್ಲದಂತೆ ಮೆಚ್ಚಿದ್ದಾರೆ. (ಬೆನ್ನುಡಿಯನ್ನು ಓದಿರಿ). ಬೆಂಗಳೂರಿನ ವರ್ಲ್ಡ್‌ ಕಲ್ಚರ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಬೆಳಗ್ಗೆ ೧೦ ಗಂಟೆಗೆ ಆರಂಭವಾಗುವ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಪ್ಪದೆ ಬನ್ನಿ. ಮುಖಪುಟ ಹೇಗಿದೆ ತಿಳಿಸಿ.

Tuesday, September 22, 2009

ಇ ಪುಸ್ತಕ ನೋಡಿದಿರಾ?


ಹರಿಪ್ರಸಾದ್‌ ನಾಡಿಗ್‌ರ ಉತ್ಸಾಹ ಮತ್ತು ಅಡ್ಡೂರು ಕೃಷ್ಣರಾವ್‌ರ ಅನುಭವ ಸೇರಿ ಆದುದೇ ಈ ‘ಕೃಷಿ ಸಂಪದ’ ಎಂಬ ಇ ಪುಸ್ತಕ. ನಾಗೇಶ್‌ ಹೆಗಡೆಯವರು ನಿನ್ನೆ ಬಿಡುಗಡೆ ಮಾಡಿದ ಪತ್ರಿಕೆಯ ಮೊದಲ ಸಂಚಿಕೆಯನ್ನು ನೀವು ಇಲ್ಲಿ ಓದಬಹುದು. ಓದಿ ಇಷ್ಟವಾಯಿತೆ ಹೇಳಿ.

Tuesday, September 1, 2009

ಬರುತ್ತದೆ! ನೆರೂಡನ ಪ್ರೇಮ ಕವಿತೆಗಳ ಪುಸ್ತಕ





ಇದು ಪಲ್ಲವ ಪ್ರಕಾಶನ ಪ್ರಕಟಿಸುತ್ತಿರುವ ನೆರೂಡ ಬರೆದ ಕವಿತೆಗಳ ಪುಸ್ತಕಕ್ಕೆ ರಚಿಸಿದ ಮುಖಪುಟ. ಈ ಪದ್ಯಗಳ ಅನುವಾದ ಜ ನಾ
ತೇಜಶ್ರೀ ಅವರದು. ಪುಸ್ತಕ ಬಿಡುಗಡೆಗೆ ಸ್ವಲ್ಪ ಸಮಯವಿದೆ. ಸದ್ಯಕ್ಕೆ ಮುಖಪುಟ ಹೇಗಿದೆ ಹೇಳಿ...

Wednesday, August 26, 2009

ಕವಿ ಮಂಜುನಾಥ್‌ ಜತೆ ಈ ಭಾನುವಾರ
























ಇತ್ತೀಚೆಗೆ ನನಗೆ ಅತ್ಯಂತ ಇಷ್ಟವಾಗಿರುವುದು ಎಸ್ ಮಂಜುನಾಥರ ಪದ್ಯಗಳು। ಕನ್ನಡ ಪದಗಳು ಅವರು ಬೆರಳಿಂದ ಮುಟ್ಟಿ ಕವನದ ಸಾಲಲ್ಲಿ ಇಟ್ಟಮೇಲೆ ಹೊಸ ಚೈತನ್ಯದಿಂದ ಮಿಡಿಯುತ್ತವೆ ಎನಿಸುವಷ್ಟು ನಾನವರ ಕವಿತೆಗೆ ಮರುಳಾಗಿದ್ದೇನೆ। ‘ಜೀವಯಾನ’ ಎಂಬ ಅವರ ೩೨ ಉಪಕವಿತೆಗಳ ಒಂದು ದೀರ್ಘ ಕವಿತೆ ಇದೀಗ ಬಿಡುಗಡೆಗೆ ಸಜ್ಜಾಗಿದೆ। ಈ ಭಾನುವಾರ ಬೆಳಗ್ಗೆ ೧೦।೩೦ಕ್ಕೆ ಗಾಂಧಿಬಜಾರಿನಲ್ಲಿರುವ ಅಂಕಿತ ಪುಸ್ತಕ ಮಳಿಗೆಯಲ್ಲಿ ಈ ಪುಟ್ಟ ಪುಸ್ತಕ ಅನಾವರಣಗೊಳ್ಳಲಿದೆ। ನೀವು ಅಲ್ಲಿ ಬಂದರೆ ಮಂಜುನಾಥ್‌ ಜತೆ ಮಾತಾಡಬಹುದು। ಕವಿತೆ ಕುರಿತು ಅವರು ಬಹಳ ಪ್ರೀತಿಯಿಂದ ಮಾತಾಡುತ್ತಾರೆ।ಎಚ್ ಎಸ್‌ ವಿ ಕೂಡ ಇರುತ್ತಾರೆ। ಎಚ್‌ ಗೋವಿಂದಯ್ಯ ಕಾರ್ಯಕ್ರಮದ ಮತ್ತೊಬ್ಬ ಅತಿಥಿ। ನೀವು ತಪ್ಪದೆ ಬರಬೇಕು ಎಂಬುದು ನನ್ನ ಒತ್ತಾಯ! ಪ್ಲೀಸ್‌॥

ಈ ಪುಸ್ತಕದ ಮುಖಪುಟದ ಫೋಟೊ ಗೆಳೆಯ ಬಾಲಸುಬ್ರಮಣ್ಯ ತೆಗೆದದ್ದು। ನಿಮ್ಮ ಕುತೂಹಲಕ್ಕೆ ‘ಜೀವಯಾನ’ದ ಮೊದಲ ಕವಿತೆ ಇಲ್ಲಿದೆ। ಉಳಿದದ್ದೆಲ್ಲಾ ಅಲ್ಲಿ ಸಿಕ್ಕಾಗ....



ಊರಿದ ಬೇರಿನ ಗುಂಟ

ಬುತ್ತಿಕಟ್ಟಿಕೊಂಡಾಗಿದೆ ಈ ಪಯಣಕ್ಕೆ
ಎರಡು ಪಿಡಚೆ ಅನ್ನ ಒಕ್ಕುಡಿತೆ ಹಾಲು
ನೀರು-ನೆರಳು, ಒಂದು ಬಾಟಲಿ ಇನ್ನೊಂದು ಛತ್ರಿ ರೂಪದಲ್ಲಿ
ಜೀವೌಷಧ ಎರಡು ಚಿಟಿಕೆ;
ಸಾಕಲ್ಲವೇ ಎಂದು ಕೇಳಿಕೊಂಡೆ-ಅಂತರಾತ್ಮ ಒಪ್ಪಿ
ಸಾಕು ಸಾಕೆಂದು ತಲೆದೂಗಿದೆ

ಊರಿಂದ ಊರಿಗೆ ಸಾಗುವುದಲ್ಲ, ಮಣ್ಣೊಳಗೆ
ಊರಿದ ಬೇರಿನಗುಂಟ ಇಳಿಯುವುದು
ಒಂದು ಮನೆ ನಾಕು ಬೀದಿ ಓಣಿಗಳಲ್ಲೆಲ್ಲಿ
ನಿಂತು ನಡೆದಾಡಿದ್ದು
ಅಂಗಾಲ ಮುದ್ದಿಸಿದ ಮಳೆ ಬಿದ್ದ ಹೂಮಣ್ಣು
ಮುಳ್ಳು ಬೆಣಚುಕಲ್ಲು ಗಾಜಿನ ಚೂರು ನೆಟ್ಟಿದ್ದನ್ನು
ಮರಳಿ ಮುಟ್ಟಿಸಿಕೊಂಡು ಅರಳುವುದು
ಅಲ್ಲಲ್ಲಿ ಅದೇ ಇಲ್ಲಿ
ಹೆಪ್ಪುಗಟ್ಟಿದ ಚಿತ್ರಗಳ ಮುಟ್ಟಿ
ಹೊರಡಿಸುವುದು
ಕಲ್ಲುಗಳು ಕರಗಿ ಹರಿದಾಗಿನ್ನು ಹಿಂದು ಮುಂದೆಲ್ಲಿ
ಯಾವುದನು ತಾನೇ ಮೀರಿ ಬೆಳೆಯುವುದಿಲ್ಲಿ
ಎಲ್ಲವೂ ಒಂದಾಗಿ ಇರುತಿರಲು

ಸಾಧಿಸುವುದೆ ಪಯಣ ಆ ಗುರಿಯನ್ನು