Tuesday, July 29, 2008

ಹೊಚ್ಚ ಹೊಸ ಮುಖಪುಟಗಳು



ವಿಶ್ವೇಶ್ವರ ಭಟ್‌ ಬರೆದ ನಾಲ್ಕು ಪುಸ್ತಕಗಳು ಇದೇ ಶನಿವಾರ(2ನೇ ತಾರೀಖು) ಬಸವನಗುಡಿಯ ವರ್ಲ್ಡ್ ಕಲ್ಚರ್ ಇನ್ಸ್ಟಿಟ್ಯೂಟಿನಲ್ಲಿ ಬಿಡುಗಡೆಯಾಗುತ್ತಿವೆ. ಸಮಯ: ಬೆಳಗ್ಗೆ 10 ಗಂಟೆ. ಅವುಗಳಲ್ಲಿ ಮೂರು ಪುಸ್ತಕಗಳಿಗೆ ನಾನು ವಿನ್ಯಾಸ ಮಾಡಿದ ಮುಖಪುಟಗಳು ಇಲ್ಲಿವೆ. ಹೌದು, ಫೀಡ್‌ಬ್ಯಾಕ್‌ ಬೇಕು!

Friday, July 18, 2008

ಪುಷ್ಪಯಾತ್ರೆ

ಆ ಹೂವು ನನಗೆ ಬೇಕಿರಲಿಲ್ಲ

ಎತ್ತಿ ಸ್ಟವ್‌ನ ಬೆಂಕಿಗೆಸೆದರೆ
ಜ್ವಾಲೆಯ ನೀಲಿ ಹೂಗಳ ನಡುವೆ
ಅಡಗಿಕೊಂಡಿತು

ತೆಗೆದು ಕೊಳದ ನೀರಿಗೆಸೆದರೆ
ಹೊಮ್ಮಿದ ಅಲೆಯ ಹೂಗಳ ನಡುವೆ
ಅರಳಿಕೊಂಡಿತು

ಬೆರಳುಗಳ ನಡುವೆ ಹಿಂಡಿ ಹಿಸುಕಿದರೆ
ಪುಡಿಯಾಗಿ ಕರಕಮಲದ ಪರಿಮಳವಾಗಿ
ಉಳಿದುಕೊಂಡಿತು

ಕೋಪದಿಂದ ಕಾಲಲ್ಲಿ ಹೊಸಕಿದರೆ
ಅಂಗಾಲಲ್ಲಿ ಬಣ್ಣದ ಬಸವನ ಪಾದವಾಗಿ
ರೂಪುಗೊಂಡಿತು

ಕಾರನ್ನೇ ಅದರ ಮೇಲೆ ಹತ್ತಿಸಿದರೂ
ಟಯರಿಗಂಟಿ ಮೋಹಕ ಹೂಚಕ್ರವಾಗಿ
ತಿರುತಿರುಗಿಕೊಂಡಿತು

ಹೋಗಲಿ ಬಿಡು ಎಂದು ಮುಡಿದುಕೊಂಡರೆ
ಸಂಜೆ ಹೊತ್ತಿಗೆಲ್ಲಾ ಬಾಡಿ ದಳದಳ
ಉದುರಿಹೋಯಿತು

Friday, July 4, 2008

ಶಪಿತನ ಹಾಡು 10

23
ನಾವು ತುಟಿ ಹತ್ತಿರ ತಂದಾಗಲೆಲ್ಲಾ
ಗೇಟು ಕಿರ್ ಎಂದು ನೀ ಬೆಚ್ಚಿ ಓಡುತ್ತಿದ್ದೆ
ಎದ್ದು ನಾನು ಮನೆಗೆ ಬಂದರೆ ಇಲ್ಲಿ
ತುಟಿಪಿಟಿಕ್ಕೆನ್ನದ ವ್ಯರ್ಥ ಏಕಾಂತ

24
ಅಂದು ನೀ ಬರಲೇಬೇಕಿತ್ತು ಬರಲಿಲ್ಲ
ಕಾದೇ ಕಾದೆ ಜೋರು ಮಳೆ ಬಂತು
ಜನರೆಲ್ಲ ಓಡಿ ಓಡಿ ತಪ್ಪಿಸಿಕೊಂಡರು
ನಾ ನೆನೆದು ನೆನೆದು ತಪ್ಪಿಸಿಕೊಂಡೆ

25
ಮಿತ್ರರು ನನ್ನನು ಮಿಡಿಸಲಾರರು
ಶತ್ರುಗಳು ನನ್ನನು ಕೆಡಿಸಲಾರರು
ಸಾಧ್ಯವೆ ಹಿಟ್‌ವಿಕೆಟ್ ಆಗುವನ ಗೆಲ್ಲಿಸೋದು
ಆತ್ಮಹತ್ಯೆಗಿಳಿದವನ ಕೊಲ್ಲಿಸೋದು?

Thursday, July 3, 2008

ನಾಗರಂಗ ನಾಟಕೋತ್ಸವಕ್ಕೆ ಬನ್ನಿ


ನಾಗಮಂಗಲ ಕನ್ನಡ ಸಂಘದ ಹುಡುಗರು ಕಳೆದರೆಡು ವರ್ಷದಂತೆ ಈ ಸಲವೂ ಉತ್ಸಾಹದಿಂದ ನಾಟಕೋತ್ಸವ ಆಯೋಜಿಸಿದ್ದಾರೆ. ಜುಲೈ ೬ರಿಂದ ೧೨ರವರೆಗೆ ಒಂದು ವಾರ ನಡೆಯುವ ಈ ನಾಟಕಗಳನ್ನು ನೋಡಲು ಬನ್ನಿ. ಇದಕ್ಕಾಗಿ ನಾನು ರಚಿಸಿದ ಭಿತ್ತಿ ಪತ್ರ ಮತ್ತು ಬ್ರೋಷರ್‌ನ ಮುಖಪುಟ ಈ ಮೇಲಿವೆ. ನಿಮಗೆ ಇಷ್ಟವಾಯಿತಾ?