

ವಿಶ್ವೇಶ್ವರ ಭಟ್ ಬರೆದ ನಾಲ್ಕು ಪುಸ್ತಕಗಳು ಇದೇ ಶನಿವಾರ(2ನೇ ತಾರೀಖು) ಬಸವನಗುಡಿಯ ವರ್ಲ್ಡ್ ಕಲ್ಚರ್ ಇನ್ಸ್ಟಿಟ್ಯೂಟಿನಲ್ಲಿ ಬಿಡುಗಡೆಯಾಗುತ್ತಿವೆ. ಸಮಯ: ಬೆಳಗ್ಗೆ 10 ಗಂಟೆ. ಅವುಗಳಲ್ಲಿ ಮೂರು ಪುಸ್ತಕಗಳಿಗೆ ನಾನು ವಿನ್ಯಾಸ ಮಾಡಿದ ಮುಖಪುಟಗಳು ಇಲ್ಲಿವೆ. ಹೌದು, ಫೀಡ್ಬ್ಯಾಕ್ ಬೇಕು!
ಆ ಹೂವು ನನಗೆ ಬೇಕಿರಲಿಲ್ಲ
ಎತ್ತಿ ಸ್ಟವ್ನ ಬೆಂಕಿಗೆಸೆದರೆ
ಜ್ವಾಲೆಯ ನೀಲಿ ಹೂಗಳ ನಡುವೆ
ಅಡಗಿಕೊಂಡಿತು
ತೆಗೆದು ಕೊಳದ ನೀರಿಗೆಸೆದರೆ
ಹೊಮ್ಮಿದ ಅಲೆಯ ಹೂಗಳ ನಡುವೆ
ಅರಳಿಕೊಂಡಿತು
ಬೆರಳುಗಳ ನಡುವೆ ಹಿಂಡಿ ಹಿಸುಕಿದರೆ
ಪುಡಿಯಾಗಿ ಕರಕಮಲದ ಪರಿಮಳವಾಗಿ
ಉಳಿದುಕೊಂಡಿತು
ಕೋಪದಿಂದ ಕಾಲಲ್ಲಿ ಹೊಸಕಿದರೆ
ಅಂಗಾಲಲ್ಲಿ ಬಣ್ಣದ ಬಸವನ ಪಾದವಾಗಿ
ರೂಪುಗೊಂಡಿತು
ಕಾರನ್ನೇ ಅದರ ಮೇಲೆ ಹತ್ತಿಸಿದರೂ
ಟಯರಿಗಂಟಿ ಮೋಹಕ ಹೂಚಕ್ರವಾಗಿ
ತಿರುತಿರುಗಿಕೊಂಡಿತು
ಹೋಗಲಿ ಬಿಡು ಎಂದು ಮುಡಿದುಕೊಂಡರೆ
ಸಂಜೆ ಹೊತ್ತಿಗೆಲ್ಲಾ ಬಾಡಿ ದಳದಳ
ಉದುರಿಹೋಯಿತು
೨೦
ಯಾರದೋ ದುಡುಕಿನ ಕೋಪಕೆ
ಹಾದಿಬದಿಯ ಕಲ್ಲಾಗಿರುವೆ ನಾನು
ನೆಲ ನೋಡಿಕೊಂಡು ನಡೆ ದಾರಿಹೋಕಾ
ನನ್ನ ಮುಕ್ತಿಗೆ ಹೂಪಾದ ನಲುಗಬೇಕಾ?
೨೧
ನಾನು ಹೋದಲ್ಲೆಲ್ಲಾ ಬೆನ್ನಟ್ಟಿ ಬಂದಿರಿ
ಊರು ಸಂತೆ ಕಾಡು ಬಿಡದೆ ಕಾಡಿದಿರಿ
ಈ ಬೆಟ್ಟದ ತುದಿಗೂ ಅಟ್ಟಿಸಿಕೊಂಡು ಬಂದಿರಿ
ಕೆಳಗೆ ಜಿಗಿಯುವೆ ಈಗ, ಹಿಂಬಾಲಿಸಬಲ್ಲಿರಾ?
೨೨
ಕಡೆಗೊಮ್ಮೆ ಯಾವುದೋ ಒಬ್ಬ ರಾಜಕುಮಾರಿ
ನನ್ನ ಕಪ್ಪೆ ಮುಖಕ್ಕೆ ಕಣ್ಮುಚ್ಚಿ ಮುತ್ತಿಟ್ಟಳು
ಆದರೂ ಆಗಲಿಲ್ಲವಲ್ಲ ಏನೆಂದರೆ ಏನೂ
ಮೊದಲಾದರೂ ರಾಜಕುಮಾರನಾಗಿದ್ದೆನೆ ನಾನು?