Tuesday, July 29, 2008

ಹೊಚ್ಚ ಹೊಸ ಮುಖಪುಟಗಳು



ವಿಶ್ವೇಶ್ವರ ಭಟ್‌ ಬರೆದ ನಾಲ್ಕು ಪುಸ್ತಕಗಳು ಇದೇ ಶನಿವಾರ(2ನೇ ತಾರೀಖು) ಬಸವನಗುಡಿಯ ವರ್ಲ್ಡ್ ಕಲ್ಚರ್ ಇನ್ಸ್ಟಿಟ್ಯೂಟಿನಲ್ಲಿ ಬಿಡುಗಡೆಯಾಗುತ್ತಿವೆ. ಸಮಯ: ಬೆಳಗ್ಗೆ 10 ಗಂಟೆ. ಅವುಗಳಲ್ಲಿ ಮೂರು ಪುಸ್ತಕಗಳಿಗೆ ನಾನು ವಿನ್ಯಾಸ ಮಾಡಿದ ಮುಖಪುಟಗಳು ಇಲ್ಲಿವೆ. ಹೌದು, ಫೀಡ್‌ಬ್ಯಾಕ್‌ ಬೇಕು!

Friday, July 18, 2008

ಪುಷ್ಪಯಾತ್ರೆ

ಆ ಹೂವು ನನಗೆ ಬೇಕಿರಲಿಲ್ಲ

ಎತ್ತಿ ಸ್ಟವ್‌ನ ಬೆಂಕಿಗೆಸೆದರೆ
ಜ್ವಾಲೆಯ ನೀಲಿ ಹೂಗಳ ನಡುವೆ
ಅಡಗಿಕೊಂಡಿತು

ತೆಗೆದು ಕೊಳದ ನೀರಿಗೆಸೆದರೆ
ಹೊಮ್ಮಿದ ಅಲೆಯ ಹೂಗಳ ನಡುವೆ
ಅರಳಿಕೊಂಡಿತು

ಬೆರಳುಗಳ ನಡುವೆ ಹಿಂಡಿ ಹಿಸುಕಿದರೆ
ಪುಡಿಯಾಗಿ ಕರಕಮಲದ ಪರಿಮಳವಾಗಿ
ಉಳಿದುಕೊಂಡಿತು

ಕೋಪದಿಂದ ಕಾಲಲ್ಲಿ ಹೊಸಕಿದರೆ
ಅಂಗಾಲಲ್ಲಿ ಬಣ್ಣದ ಬಸವನ ಪಾದವಾಗಿ
ರೂಪುಗೊಂಡಿತು

ಕಾರನ್ನೇ ಅದರ ಮೇಲೆ ಹತ್ತಿಸಿದರೂ
ಟಯರಿಗಂಟಿ ಮೋಹಕ ಹೂಚಕ್ರವಾಗಿ
ತಿರುತಿರುಗಿಕೊಂಡಿತು

ಹೋಗಲಿ ಬಿಡು ಎಂದು ಮುಡಿದುಕೊಂಡರೆ
ಸಂಜೆ ಹೊತ್ತಿಗೆಲ್ಲಾ ಬಾಡಿ ದಳದಳ
ಉದುರಿಹೋಯಿತು

Friday, July 4, 2008

ಶಪಿತನ ಹಾಡು 10

23
ನಾವು ತುಟಿ ಹತ್ತಿರ ತಂದಾಗಲೆಲ್ಲಾ
ಗೇಟು ಕಿರ್ ಎಂದು ನೀ ಬೆಚ್ಚಿ ಓಡುತ್ತಿದ್ದೆ
ಎದ್ದು ನಾನು ಮನೆಗೆ ಬಂದರೆ ಇಲ್ಲಿ
ತುಟಿಪಿಟಿಕ್ಕೆನ್ನದ ವ್ಯರ್ಥ ಏಕಾಂತ

24
ಅಂದು ನೀ ಬರಲೇಬೇಕಿತ್ತು ಬರಲಿಲ್ಲ
ಕಾದೇ ಕಾದೆ ಜೋರು ಮಳೆ ಬಂತು
ಜನರೆಲ್ಲ ಓಡಿ ಓಡಿ ತಪ್ಪಿಸಿಕೊಂಡರು
ನಾ ನೆನೆದು ನೆನೆದು ತಪ್ಪಿಸಿಕೊಂಡೆ

25
ಮಿತ್ರರು ನನ್ನನು ಮಿಡಿಸಲಾರರು
ಶತ್ರುಗಳು ನನ್ನನು ಕೆಡಿಸಲಾರರು
ಸಾಧ್ಯವೆ ಹಿಟ್‌ವಿಕೆಟ್ ಆಗುವನ ಗೆಲ್ಲಿಸೋದು
ಆತ್ಮಹತ್ಯೆಗಿಳಿದವನ ಕೊಲ್ಲಿಸೋದು?

Thursday, July 3, 2008

ನಾಗರಂಗ ನಾಟಕೋತ್ಸವಕ್ಕೆ ಬನ್ನಿ


ನಾಗಮಂಗಲ ಕನ್ನಡ ಸಂಘದ ಹುಡುಗರು ಕಳೆದರೆಡು ವರ್ಷದಂತೆ ಈ ಸಲವೂ ಉತ್ಸಾಹದಿಂದ ನಾಟಕೋತ್ಸವ ಆಯೋಜಿಸಿದ್ದಾರೆ. ಜುಲೈ ೬ರಿಂದ ೧೨ರವರೆಗೆ ಒಂದು ವಾರ ನಡೆಯುವ ಈ ನಾಟಕಗಳನ್ನು ನೋಡಲು ಬನ್ನಿ. ಇದಕ್ಕಾಗಿ ನಾನು ರಚಿಸಿದ ಭಿತ್ತಿ ಪತ್ರ ಮತ್ತು ಬ್ರೋಷರ್‌ನ ಮುಖಪುಟ ಈ ಮೇಲಿವೆ. ನಿಮಗೆ ಇಷ್ಟವಾಯಿತಾ?

Friday, June 13, 2008

ಶಪಿತನ ಹಾಡು ಭಾಗ 9


೨೦
ಯಾರದೋ ದುಡುಕಿನ ಕೋಪಕೆ
ಹಾದಿಬದಿಯ ಕಲ್ಲಾಗಿರುವೆ ನಾನು
ನೆಲ ನೋಡಿಕೊಂಡು ನಡೆ ದಾರಿಹೋಕಾ
ನನ್ನ ಮುಕ್ತಿಗೆ ಹೂಪಾದ ನಲುಗಬೇಕಾ?

೨೧
ನಾನು ಹೋದಲ್ಲೆಲ್ಲಾ ಬೆನ್ನಟ್ಟಿ ಬಂದಿರಿ
ಊರು ಸಂತೆ ಕಾಡು ಬಿಡದೆ ಕಾಡಿದಿರಿ
ಈ ಬೆಟ್ಟದ ತುದಿಗೂ ಅಟ್ಟಿಸಿಕೊಂಡು ಬಂದಿರಿ
ಕೆಳಗೆ ಜಿಗಿಯುವೆ ಈಗ, ಹಿಂಬಾಲಿಸಬಲ್ಲಿರಾ?

೨೨
ಕಡೆಗೊಮ್ಮೆ ಯಾವುದೋ ಒಬ್ಬ ರಾಜಕುಮಾರಿ
ನನ್ನ ಕಪ್ಪೆ ಮುಖಕ್ಕೆ ಕಣ್ಮುಚ್ಚಿ ಮುತ್ತಿಟ್ಟಳು
ಆದರೂ ಆಗಲಿಲ್ಲವಲ್ಲ ಏನೆಂದರೆ ಏನೂ
ಮೊದಲಾದರೂ ರಾಜಕುಮಾರನಾಗಿದ್ದೆನೆ ನಾನು?

Friday, June 6, 2008

ಅಳಿದುಳಿದ ಮದ್ಯಸಾರ!

ನಾನೂ ನಿಮ್ಮಂತೆಯೇ ಮುಗಿಯಿತು ಎಂದುಕೊಂಡಿದ್ದೆ. ಆದರೆ ಆಗ ಬರೆದು ಬಳಸದೆ ಉಳಿದಿದ್ದ ಈ ಪದ್ಯಗಳು ಮೊನ್ನೆ ಸಿಕ್ಕವು. ಸಿನಿಮಾದ ಡಿವಿಡಿಯಲ್ಲಿನ ಡಿಲೀಟೆಡ್ ಸೀನ್‌ಗಳಂತೆ ಓದಿಕೊಳ್ಳಬಹುದೇನೊ ಎನಿಸಿ ಇಲ್ಲಿ ಹಾಕುತ್ತಿರುವೆ. ನಿಜಕ್ಕೂ ಇದು ಕಡೆಯ ಕಂತು!

ತುಸು ಜಾಸ್ತಿ ಆಗಿದೆ ಇಂದು
ಮೈಮೇಲೆ ಬಿದ್ದದ್ದಕ್ಕೆ ಸಾರಿ
ನಿಮ್ಮನ್ಯಾಕೆ ಅಳಿಸಲಿ ಹೇಳಿ
ನನ್ನೆದೆ ಮೇಲ್ ಬಿದ್ದುದ ತೋರಿ

ಯಾರು ಪರೀಕ್ಷೆ ಮಾಡಿದರೇನು
ನೂರು ಪ್ರಶ್ನೆ ಹಾಕಿದರೇನು
ಚೂರೂ ಹೆದರುವುದಿಲ್ಲ ನಾನು
ಬಾರು ಎಲ್ಲಿದೆಯೆಂದು ಗೊತ್ತಿಲ್ಲವೇನು?

ದ್ರೋಹದ ಬೆಂಕಿಯಲಿ ನಾನು
ಉರೀತಿರುವೆ ನಖಶಿಖಾಂತ
ಯಾರು ಕುಡೀತಿದ್ದರು ಹೀಗೆ
ಆಗಿದ್ದರೆಲ್ಲವೂ ಸುಖಾಂತ?

ಪಾರು ಮಾಡೋ ಕೃಷ್ಣಾ
ಪಾರು ಮಾಡೋ
ನಿಯರೆಸ್ಟ್‌ ಬಾರಿನ
ದಾರಿ ತೋರೊ

ಮೋರಿಯಲಿ ಬಿದ್ದವನ ಕಾಣಬಲ್ಲ ನಿಮಗೆ
ಕಾಣದು ಅವನ ನರಕ ಸದೃಶ ಹಗಲು
ಬೆಚ್ಚಿಸುವ ಥರಥರದ ದಿಗಿಲು
ಮತ್ತೀಗ ಅವನು ತೇಲುತಿರುವ ಮುಗಿಲು

ನೀನು ಕೈ ಕೊಟ್ಟದ್ದೂ
ಒಳ್ಳೆಯದೇ ಆಯಿತು
ಇಲ್ಲದಿದ್ದರೆನಗೆ ಮದಿರೆಯ
ಪರಿಚಯವೇ ಆಗುತ್ತಿರಲಿಲ್ಲ

ಆದಿಯೂ ಇಲ್ಲ ಅಂತ್ಯವೂ ಇಲ್ಲ
ನನ್ನದೊಂದು ವಿಚಿತ್ರ ವ್ಯಥೆ
ಮದ್ಯದಲ್ಲೇ ಶುರುವಾದದ್ದು
ಮದ್ಯದಲ್ಲೇ ಮುಗಿವುದೆ ಕತೆ?

Friday, May 23, 2008

ಶಪಿತನ ಹಾಡು 8

19
ಹಿಡಿದದ್ದು ಜಾರಿ ಹೋಗುತ್ತೆ ಉಳಿಯುವುದಿಲ್ಲ
ಕಂಗಳಂತೆಯೇ ನನ್ನ ಕೈಗಳೂ ಸದಾ ಒದ್ದೆ
ಜಾರಿದುದು ಮಣ್ಣಿಗೇ ಬೀಳುತ್ತೆ ತುಪ್ಪದಲ್ಲಲ್ಲ
ಅಯ್ಯೋ ನನ್ನ ಹಣೆಬರಹವೇ ಅಂಥದ್ದೆ!