Sunday, April 6, 2008

ಕಾಮೆಂಟ್‌ ರೀ

ಚುನಾವಣೆ ದಿನಾಂಕಗಳು ಪ್ರಕಟಗೊಂಡಿದ್ದು ಪ್ರಚಾರ ಕಾರ್ಯ ಬಿರುಸಿನಿಂದ ಆರಂಭವಾಗಿದೆ. ವಿನೂತನ ಪ್ರಚಾರ ವಿಧಾನಗಳೂ ನೋಡಸಿಗುತ್ತಿವೆ. ಬಸವನಗುಡಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಚಂದ್ರಶೇಖರ್ ಮತದಾರರಲ್ಲಿಗೆ ತೆರಳಿ ‘ನೀವು ಗೆಲ್ಲಿಸುವುದಾಗಿ ಭರವಸೆ ನೀಡಿದರೆ ಮಾತ್ರ ಕಣಕ್ಕಿಳಿಯುತ್ತೇನೆ’ ಅಂತ ಹೊಸ ತಂತ್ರ ಹೂಡಿದ್ದಾರಂತೆ. ‘ಯಾರು ನನಗೆ ಓಟು ಹಾಕುತ್ತೀರೋ ಅವರೆಲ್ಲಾ ಕೈಯೆತ್ತಿ’ ಅಂತ ಕೇಳಿ, ಕೈಗಳನ್ನು ಎಣಿಸಿಕೊಳ್ಳುತ್ತಿದ್ದಾರಂತೆ. ವಿಧಾನವೇನೋ ಚೆನ್ನಾಗಿದೆ. ಆದರೆ ಈಗ ಕೈಯೆತ್ತಿದವರು ಮತದಾನದ ದಿನವೂ ಕೈಯೆತ್ತಿದರೆ ಮಾತ್ರ ಕಷ್ಟ!
*
ಕಾವೇರಿ ವಿವಾದ ತಣ್ಣಗಾಗಿದ್ದು, ಹೊಗೆನಕಲ್ ವಿವಾದ ಕಾವೇರಿದೆ! ತಮಿಳು ಚಿತ್ರನಟರು ರಾಜ್ಯಕ್ಕೆ ತಮ್ಮ ಬೆಂಬಲ ಸೂಚಿಸಲು ಮೊನ್ನೆ ಶುಕ್ರವಾರ ಟೋಕನ್ ಫಾಸ್ಟ್ (ಸಾಂಕೇತಿಕ ಉಪವಾಸ) ಮಾಡಿದರು. ಮರುದಿನ ಪತ್ರಿಕೆಗಳಲ್ಲಿ ಈ ಸುದ್ದಿ ಓದಿ, ಅಲ್ಲಾ ಸ್ವಾಮಿ, ಊಟ ಮಾಡಲು ಟೋಕನ್ ತೆಗೆದುಕೊಳ್ಳೋದು ಸಹಜ. ಆದರೆ ಉಪವಾಸ ಮಾಡೋಕೂ ಟೋಕನ್ನೆ? ಅಂತ ಅಸಂಬದ್ಧ ಪ್ರಶ್ನೆ ಕೇಳಿದ್ದು ಮಿಸ್ ಸೋಸಿಲಿಯಲ್ಲದೆ ಇನ್ಯಾರು?!
ಮುತ್ತಪ್ಪ ರೈ ಕೂಡ ತಮ್ಮ ಸಂಘಟನೆ ರೈ ಕರ್ನಾಟಕ ಅಲ್ಲಲ್ಲ ಜೈ ಕರ್ನಾಟಕದ ವತಿಯಿಂದ ಹೊಗೆನಕಲ್ ಯೋಜನೆ ವಿರುದ್ಧ ಮೊನ್ನೆ ಪ್ರತಿಭಟನೆ ನಡೆಸಿದರು. ೫೦೦ ಕಾರುಗಳಲ್ಲಿ ಬಿಡದಿಯಿಂದ ಹೊಗೆನಕಲ್‌ಗೆ ರ್ಯಾಲಿಯಲ್ಲಿ ಹೊರಟ ಪ್ರತಿಭಟನಾಕಾರರನ್ನು ನೀವು ‘ಕಾರ್’ ಸೇವಕರು ಎಂದು ಧಾರಾಳವಾಗಿ ಕರೆಯಬಹುದು!
*
ಟಿಬೆಟ್ ಬಗೆಗಿನ ಡಿಬೇಟ್ ಜೋರಾಗಿದೆ. ಒಲಿಂಪಿಕ್ ಜ್ಯೋತಿಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಅಂತ ಫುಟ್‌ಬಾಲ್ ಆಟಗಾರ ಬೈಚುಂಗ್ ಭುಟಿಯಾ ಹೇಳಿದ್ದು ಟಿಬೆಟ್ ಬೆಂಬಲಿಗರನ್ನು ಖುಷಿಗೊಳಿಸಿದೆ. ಒಂದು ವೇಳೆ ತಮಿಳುನಾಡಿನಲ್ಲಿ ದಲೈಲಾಮಾರ ಅಭಿಮಾನಿಗಳ ಸಂಘವೊಂದು ಶುರುವಾದರೆ ಅದಕ್ಕೆ ಏನು ಹೆಸರಿಡಬಹುದು?
ವಿಡುದಲೈ ಲಾಮಾ ಚಿರುತೆಗಳ್!
*
ಎರಡನೇ ಟೆಸ್ಟಿನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಕೇವಲ ೨೦ ಓವರು ಆಡುವುದರಲ್ಲಿ ಎಲ್ಲರೂ ಔಟಾಗಿ ಹೋದರು. ಆದರೂ ಅದಕ್ಕೆ ಬೇಸರ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಎಷ್ಟೇ ಆದರೂ ನಾವು ೨೦-೨೦ ಚಾಂಪಿಯನ್ನರಲ್ಲವೆ?!

No comments: